For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ಮೌಲಾನಾ ಅಬ್ದುಲ್ ಕಲಾಂ ಅಜಾದ್ ಜಯಂತಿ



ಮೌಲಾನಾ ಅಬ್ದುಲ್ ಕಲಾಂ ಅಜಾದ್ ಜಯಂತಿ

ವಿವಿಧತೆಯಲ್ಲಿ ಏಕತೆಯ ನೆಲೆಯಾದ ಭಾರತದಲ್ಲಿ ಹಿಂದೂ ಮುಸ್ಲಿಮರಿಬ್ಬರೂ ಸೌಹಾರ್ದತೆಯಿಂದ ಒಟ್ಟಿಗೆ ಬಾಳಬೇಕು. ಧರ್ಮಕ್ಕೂ, ಮನುಷ್ಯನು ಯಾವ ರಾಷ್ಟ್ರಕ್ಕೆ ಸೇರಿದವನು ಎಂಬುವುದಕ್ಕೂ ಯಾವುದೇ ಸಂಬಂಧವಿಲ್ಲವೆಂದು ನಂಬಿ ಆ ಆದರ್ಶಕ್ಕಾಗಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದವರೇ ಮೌಲಾನಾ ಅಬ್ದುಲ್‌ ಕಲಾಂ ಆಜಾದ್‌.

ದೇಶದ ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರ ಜನ್ಮದಿನವನ್ನೇ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ.

11 ನವೆಂಬರ್‌ 1888ರಲ್ಲಿ ಮೆಕ್ಕಾದಲ್ಲಿ ಜನಿಸಿದ ಮೌಲಾನಾ ಆಜಾದ್‌ರ ಪೂರ್ಣ ಹೆಸರು ಅಬ್ದುಲ್‌ ಕಲಾಂ ಘುಲಮ ಮಹಿಯುದ್ದಿನ್‌. ಇವರು ಅರೇಬಿಕ್‌, ಪರ್ಷಿಯನ್‌, ಉರ್ದು ಮತ್ತು ಇಸ್ಲಾಂ ತಾತ್ವಿಕ ಕ್ಷೇತ್ರದ ಮಹಾನ್‌ ವಿದ್ವಾಂಸರಾಗಿದ್ದರು. ಆಜಾದರ ತಂದೆ ತಾಯಿಗಳಿಬ್ಬರೂ ಅಸಾಧಾರಣ ವಿದ್ವಾಂಸರಾಗಿದ್ದವರು. ಇಸ್ಲಾಂ ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಆಜಾದರು ಚಿಕ್ಕ ವಯಸ್ಸಿನಲ್ಲಿಯೇ ಇಸ್ಲಾಂ ಧರ್ಮದ ಅಧ್ಯಯನವನ್ನು ಶ್ರದ್ಧೆಯಿಂದ ಮಾಡಿದ್ದರು. ಆಜಾದರಿಗೆ ಪತ್ರಿಕೋದ್ಯಮದಲ್ಲಿಯೂ ಹೆಚ್ಚಿನ ಆಸಕ್ತಿಯಿತ್ತು. ತಮ್ಮ 16ನೇ ವಯಸ್ಸಿನಲ್ಲಿಯೇ ಆಜಾದ್‌ ಎಂಬ ಅಂಕಿತ ನಾಮವನ್ನಿಟ್ಟುಕೊಂಡು ಪತ್ರಿಕಾ ಪ್ರಪಂಚಕ್ಕಿಳಿದು ಅಲ್‌ ಸಿದ್ವಾ ಎಂಬ ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುತ್ತಿದ್ದರು.

ಮುಸ್ಲಿಮರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಒಂದು ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಪ್ರಮುಖ ಸಾಧನ. ಹೀಗಾಗಿ ಅವರು ಶಿಕ್ಷಣ ಪಡೆದು, ಮೂಢನಂಬಿಕೆಗಳನ್ನು ಮೆಟ್ಟಿ ಸಮಾಜದ ಸುಧಾರಣೆ ಮಾಡಿಕೊಳ್ಳಬೇಕು ಮತ್ತು ಮುಸ್ಲಿಂ ಸಮುದಾಯ ಮುಖ್ಯವಾಹಿನಿಗೆ ಬರಬೇಕು ಎನ್ನುವುದು ಆಜಾದರ ಹಂಬಲವಾಗಿತ್ತು.

ಪತ್ರಿಕಾ ಅಸ್ತ್ರಕ್ಕೆ ಬ್ರಿಟಿಷ್‌ ಕೊಕ್ಕೆ

ತಮ್ಮ 24ನೇ ವಯಸ್ಸಿನಲ್ಲಿ ಅಲ್‌ ಹಿಲಾಲ್‌ ಎಂಬ ಉರ್ದು ಪತ್ರಿಕೆಯನ್ನು ಆಜಾದ್‌ ಪ್ರಾರಂಭಿಸಿದರು. ಹಿಂದು-ಮುಸ್ಲಿಮರು ನಾವೆಲ್ಲರೂ ಒಂದು ಎಂಬ ಭಾವದಿಂದ ಸಹೋದರರಾಗಿ ಬಾಳಬೇಕು ಎಂಬುದು ಇವರ ಮೂಲ ಮಂತ್ರವಾಗಿತ್ತು. ಹಿಂದು-ಮುಸ್ಲಿಮರು ಒಂದಾದರೆ ತಾವು ಗಂಟುಮೂಟೆ ಕಟ್ಟಿಕೊಂಡು ಹೊರಡಬೇಕಾಗುತ್ತದೆಂದು ಬ್ರಿಟಿಷರಿಗೆ ಅರ್ಥವಾಯಿತು. ಅವರು ಈ ಒಗ್ಗಟ್ಟನ್ನು ಮುರಿಯಲು ಸರ್ವಪ್ರಯತ್ನಗಳನ್ನು ಮಾಡಿದರು. ಹಿಂದು-ಮುಸ್ಲಿಮರು ಅನ್ಯೋನ್ಯವಾಗಿ ಇರಬೇಕೆಂದು ಸಾರುತ್ತಿದ್ದ ಆಜಾದರು ಬ್ರಿಟಿಷ್‌ ಸರ್ಕಾರದ ಹಾದಿಯಲ್ಲಿ ಮುಳ್ಳಾದರು. ಬ್ರಿಟಿಷರ ಜನ ವಿರೋಧಿ ನೀತಿ, ಭಾರತೀಯ ನಾಗರಿಕರಿಗೆ ನೀಡುತ್ತಿರುವ ಕಿರುಕುಳ ಮುಂತಾದ ಕ್ರಾಂತಿಕಾರಿ ವಿಚಾರಗಳನ್ನು ಅಲ್‌ ಹಿಲಾಲ್‌ ವಾರಪತ್ರಿಕೆಯ ಮೂಲಕ ಜನರಿಗೆ ಮುಟ್ಟಿಸುತ್ತಿದ್ದರು. ಈ ಪತ್ರಿಕೆಯ 26000 ಪ್ರತಿಗಳು ಮಾರಾಟವಾಗುತ್ತಿದ್ದವು. ಇದರಿಂದ ಕೆಂಡಾಮಂಡಲವಾದ ಬ್ರಿಟಿಷ್‌ ಸರ್ಕಾರ 1914ರಲ್ಲಿ ಅಲ್‌ ಹಿಲಾಲ್‌ ಪತ್ರಿಕೆಯ ಮೇಲೆ ನಿಷೇಧ ಹೇರಿತು. ಇದರಿಂದ ವಿಚಲಿತರಾಗದ ಆಜಾದರು ಕೆಲವೇ ತಿಂಗಳಲ್ಲಿ ಅಲ್‌ ಬಲಾಘ… ಎನ್ನುವ ಮತ್ತೂಂದು ವಾರಪತ್ರಿಕೆಯನ್ನು ಪ್ರಾರಂಭಿಸಿ ಮೊದಲಿನಂತೆಯೇ ಬ್ರಿಟಿಷ್‌ ಸರ್ಕಾರವನ್ನು ಟೀಕಿಸಲು ಪ್ರಾರಂಭಿಸಿದರು. ಸರ್ಕಾರವು ಇವರಿಗೆ ರಾಂಚಿಯನ್ನು ಬಿಟ್ಟು ಹೊರಹೋಗಕೂಡದೆಂದು ನಿರ್ಬಂಧ ವಿಧಿಸಿತು.

ಬ್ರಿಟಿಷ್‌ ಸರ್ಕಾರ ಭಾರತದ ಆಡಳಿತದಲ್ಲಿ ಕೆಲವು ಸುಧಾರಣೆಗಳನ್ನು ಘೋಷಿಸಿತು. ಆದರೆ ಇವು ಏನೂ ಸಾಲದು ಹಾಗೂ ಜನಪರ ಸುಧಾರಣೆಗಳಲ್ಲ ಎಂದು ಆಜಾದರು ವಿರೋಧಿಸಿದರು. ಸರ್ಕಾರ ಮತ್ತೆ ಇವರನ್ನು ಒಂದು ವರ್ಷಕಾಲ ಸೆರೆಮನೆಯಲ್ಲಿ ಬಂಧಿಸಿಡುತ್ತದೆ. ಸದಾ ರಾಷ್ಟ್ರದ ಏಕತೆಯನ್ನು ಪ್ರತಿಪಾದಿಸುತ್ತಿದ್ದ ಆಜಾದರು ಮಹಾತ್ಮಾ ಗಾಂಧೀಜಿಯವರ ಅನುಯಾಯಿಯಾಗಿದ್ದರು. 1942ರ ಭಾರತ ಬಿಟ್ಟು ತೊಲಗಿ ಚಳವಳಿ ಪ್ರಾರಂಭವಾಗುತ್ತಲೇ ಸರ್ಕಾರ ಇವರನ್ನು ದಸ್ತಗಿರಿ ಮಾಡಿ ಜೈಲಿಗೆ ಕಳುಹಿಸಿತು. 1945ರಲ್ಲಿ ಕಾಂಗ್ರೆಸ್‌ ನಾಯಕರ ಬಿಡುಗಡೆಯಾಯಿತು. ಅಲ್ಲಿಂದ ಸುಮಾರು ಒಂದು ವರ್ಷ ಕಾಲ ಬ್ರಿಟಿಷ್‌ ಸರ್ಕಾರದೊಂದಿಗೆ ಮಾತುಕತೆಗಳಾದವು. ಆಗ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ಆಜಾದರು ಹಿಂದು-ಮುಸ್ಲಿಮರ ಸ್ನೇಹದ ತಮ್ಮ ನೀತಿಯನ್ನು ಪ್ರತಿಪಾದಿಸಿದರು. ಪ್ರತ್ಯೇಕ ರಾಷ್ಟ್ರ ಪಾಕಿಸ್ತಾನದ ಬೇಡಿಕೆಯನ್ನಿಟ್ಟ ಮುಸ್ಲಿಮರೆಲ್ಲರೂ ಆಜಾದರನ್ನು ಮೂದಲಿಸಿದರು, ಅವಹೇಳನ ಮಾಡಿದರು. ಆದರೆ ಆಜಾದರು ಹಿಂದು-ಮುಸ್ಲಿಮರ ಏಕತೆಯ ತಮ್ಮ ದೃಢನಂಬಿಕೆಯನ್ನು ಬಿಟ್ಟುಕೊಡಲಿಲ್ಲ.

ದೇಶದ ಮೊದಲ ಶಿಕ್ಷಣ ಮಂತ್ರಿ

ಸ್ವತಂತ್ರ ಭಾರತದ ಜವಾಹರಲಾಲ್‌ ನೆಹರೂ ಮಂತ್ರಿ ಮಂಡಲದಲ್ಲಿ 1958ರ ಫೆಬ್ರುವರಿ 22ರವರೆಗೂ ಭಾರತ ಸರ್ಕಾರದ ಮೊಟ್ಟಮೊದಲ ವಿದ್ಯಾ ಮಂತ್ರಿಯಾಗಿ ಆಜಾದ್‌ ಕಾರ್ಯನಿರ್ವಹಿಸಿದರು. ಪ್ರಾಥಮಿಕ, ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹಲವಾರು ಫ‌ಲಪ್ರದ ಯೋಜನೆಗಳನ್ನು ಜಾರಿಗೊಳಿಸಿದರು. ವೈಜಾnನಿಕ ಶಿಕ್ಷಣಕ್ಕೆ ಮಹತ್ವ ನೀಡಿದ್ದಲ್ಲದೆ, ವಿಶ್ವವಿದ್ಯಾಲಯಗಳ ಸ್ಥಾಪನೆ ಮಾಡಿದರು. ಇಂದಿನ ವಿದ್ಯಾರ್ಥಿಗಳ ಪ್ರಥಮಾದ್ಯತೆಯ ಐಐಟಿ ಸಂಸ್ಥೆ ಹಾಗೂ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಸ್ಥಾಪನೆ ಮಾಡಿದ ಕೀರ್ತಿ ಆಜಾದರಿಗೆ ಸಲ್ಲುತ್ತದೆ. ಇವರ ಪ್ರಸಿದ್ಧ ಆತ್ಮಕಥನ "ಇಂಡಿಯಾ ವಿನ್ಸ್‌ ಫ್ರೀಡಂ' ಪ್ರಸಿದ್ಧಿಯ ಜೊತೆಗೆ ಚರ್ಚಾಸ್ಪದ ಕೃತಿಯಾಗಿದೆ. ಸರ್ಕಾರವು ಮೌಲಾನಾ ಆಜಾದ್‌ರ ಕೊಡುಗೆಗಳನ್ನು ಗಣಿಸಿ 1992ರಲ್ಲಿ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿ ನೀಡಿ ಅವರ ಕೊಡುಗೆಗಳನ್ನು ಗೌರವಿಸಿದೆ.

ಆಜಾದ್‌ ಕನಸು ನನಸಾಗಿಸೋಣ

ರಾಷ್ಟ್ರಮಟ್ಟದಲ್ಲಿ ಈಗ ಶಿಕ್ಷಣ ಸಚಿವಾಲಯ ಇಲ್ಲ. ಅದೇ ಮಾನವ ಸಂಪನ್ಮೂಲ ಸಚಿವಾಲಯವಾಗಿದೆ. ಆಜಾದ್‌ರ ಕಾಲದಿಂದ ಇಲ್ಲಿಯವರಗೆ ದೇಶದ ಶಿಕ್ಷಣ ವ್ಯವಸ್ಥೆ ಹಲವು ಹಂತಗಳನ್ನು ದಾಟಿ ಮುಂದೆ ಬಂದಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಭಾರತ ಎಷ್ಟೇ ಸುಧಾರಿಸಿದೆ ಎಂದು ನಾವು ಹೇಳಿದರೂ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಲೋಪದೋಷಗಳು ಇನ್ನೂ ಉಳಿದುಕೊಂಡಿವೆ. ಮುಖ್ಯವಾಗಿ, ಮಕ್ಕಳಿಗೆ ಬದುಕುವ ಶಿಕ್ಷಣವನ್ನು ನಾವು ನೀಡುತ್ತಿಲ್ಲ. ಉದ್ಯೋಗ ಗಿಟ್ಟಿಸಿಕೊಳ್ಳುವ ಶಿಕ್ಷಣವನ್ನಷ್ಟೇ ನೀಡುತ್ತಿದ್ದೇವೆ.

ಮೌಲಾನಾ ಅಬ್ದುಲ್‌ ಕಲಾಂ ಆಜಾದ್‌ರ ಜನ್ಮದಿನವನ್ನು ಶಿಕ್ಷಣ ದಿನವನ್ನಾಗಿ ಆಚರಿಸುವ ನಾವು ಇದನ್ನು ಕೇವಲ ಸಾಂಕೇತಿಕ ಆಚರಣೆಗಷ್ಟೇ ಸೀಮಿತಗೊಳಿಸಬಾರದು. ಹಾಗೆ ಮಾಡಿದರೆ ಅದು ಆಜಾದ್‌ ಅವರ ವ್ಯಕ್ತಿತ್ವಕ್ಕೆ ಎಸಗುವ ಅಪಚಾರ. ದೇಶದ ಶಿಕ್ಷಣ ಕ್ಷೇತ್ರಕ್ಕೆ ಆರಂಭಿಕ ದಿನಗಳಲ್ಲಿ ಭದ್ರ ಬುನಾದಿ ಹಾಕಿದ ಆಜಾದ್‌ ಜನಿಸಿ ಇಂದಿಗೆ 126 ವರ್ಷಗಳಾದವು. ಈಗಲೂ ನಾವು ಶೈಕ್ಷಣಿಕ ಸುಧಾರಣೆಯ ಬಗ್ಗೆ ಮಾತನಾಡುತ್ತಿದ್ದೇವೆಯೇ ಹೊರತು ನಿಜವಾದ ಶ್ರಮ ಹಾಕಿ ಶಿಕ್ಷಣ ವ್ಯವಸ್ಥೆಯನ್ನು ಮೇಲೆತ್ತುತ್ತಿಲ್ಲ ಎಂಬುದು ವಿಪರ್ಯಾಸ.

"ಶಿಕ್ಷಣವೆಂಬುದು ಎಲ್ಲರ ಆಜನ್ಮ ಸಿದ್ಧ ಹಕ್ಕು. ಅದನ್ನು ಪಡೆಯದೆ ವ್ಯಕ್ತಿಯೊಬ್ಬ ಪರಿಪೂರ್ಣ ಪ್ರಜೆಯಾಗಲಾರ' ಎಂದು 50 ವರ್ಷಗಳ ಹಿಂದೆಯೇ ಆಜಾದ್‌ ಹೇಳಿದ್ದರು. ಇಂದಿಗೂ ನಮ್ಮಲ್ಲಿ ಶಿಕ್ಷಣದಿಂದ ವಂಚಿತರಾಗುವ ಲಕ್ಷಾಂತರ ಮಕ್ಕಳಿದ್ದಾರೆ. ಭಾರತ ಬೆಳೆಯುತ್ತಿದೆ ಎಂದು ಹೇಳಿಕೊಳ್ಳುವ ನಾವು, ಪ್ರತಿಯೊಂದು ಮಗುವಿಗೂ ಕನಿಷ್ಠ ಶಿಕ್ಷಣ ಸಿಗುವಂತೆ ಮಾಡುವಲ್ಲಿ ಎಲ್ಲಿಯವರೆಗೆ ಯಶಸ್ವಿಯಾಗುವುದಿಲ್ಲವೋ ಅಲ್ಲಿಯವರೆಗೆ ಆಜಾದ್‌ರ ಕನಸು ನನಸಾಗದು.

ಮಾಹಿತಿ ಕೃಪೆ : ಉದಯವಾಣಿ
Share:

No comments:

Post a Comment

ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com