💐ಶ್ರದ್ಧೆ💐
ಚಿಕ್ಕವರಾದರೇನು ದೊಡ್ಡವರಾದರೇನು ಶ್ರದ್ಧೆ ಉಳ್ಳವರು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು, ಶ್ರದ್ಧೆಯಿಲ್ಲದವರು ಎಂಥವರಿದ್ದರೂ ಏನನ್ನೂ ಸಾಧಿಸಲಾರರು. ಸಿದ್ಧಿಯ ಶ್ರೀ ಗಿರಿಯತ್ತ ನಮ್ಮನ್ನು ಕೈಹಿಡಿದು ಮುನ್ನಡೆಸುವುದೇ ಈ ಶ್ರದ್ಧೆ.
ಒಂದು ಭದ್ರವಾದ ಕೋಟೆಯ ಗೋಡೆ ಇತ್ತು ಅದರಲ್ಲಿ ಆಲದ ಮರದ ಒಂದು ಚಿಕ್ಕಬೀಜ ಬಂದು ಬಿದ್ದಿತು. ಕೋಟೆ ಗೋಡೆಯು ದರ್ಪದಿಂದ ಕೇಳಿತು- "ಇಲ್ಲಿ ಮಣ್ಣಿಲ್ಲ, ನೀರಿಲ್ಲ ನೀನು ಹೇಗೆ ಬೆಳೆಯುತ್ತಿ?" "ನೂಡುತ್ತಿರು ನಾನು ಹೇಗೆ ಬೆಳೆಯುತ್ತೇನೆ!" ಎಂದಿತು ಬೀಜ.ಅಷ್ಟರಲ್ಲಿ ಮಳೆ ಬಿದ್ದಿತು. ಅಷ್ಟು ಹಸಿ ಸಾಕಾಗಿತ್ತು. ಅದು ಬೇರು ಬಿಟ್ಟಿತು. ಬಿಗಿ ಹಿಡಿಯಿತು. ನಿಧಾನವಾಗಿ ಗಾಳಿ ಧೂಳ ಬಳಸಿಕೊಂಡು ಮೊಳಕೆಯೊಡೆಯಿತು. ದಿನಗಳು ಉರುಳಿದವು. ಋತುಗಳು ಸರಿದವು. ಬೇರು ಬಲಿಷ್ಠವಾಯಿತು! ಕೋಟೆಗೋಡೆ ಸಡಿಲಾಯಿತು!! ಚಿಕ್ಕ ಬೀಜದ ಶ್ರದ್ಧೆಗೆ ಭದ್ರವಾದ ಕೋಟೆಗೋಡೆಯು ನಡುಗಿ ಹೋಗಿತ್ತು.!
💐ಅದಮ್ಯ ಉತ್ಸಾಹ💐
ತೇನಸಿಂಗನು ಉತ್ಸಾಹಿ ಬಾಲಕ, ದನಗಾಯಿ ಹಿಮದ-ಬೆಟ್ಟಗಳ ಮಧ್ಯಮ ಚಿಕ್ಕ ಗ್ರಾಮದಲ್ಲಿ ವಾಸಿಸುತ್ತಿದ್ದನು. ದಿನ ಬೆಳಗಾದರೆ ಜಗತ್ತಿನ ಅತ್ಯುನ್ನತ ಪರ್ವತ ಎವರೆಸ್ಟ್ ಶಿಖರದ ದರ್ಶನ ಆಗುತ್ತಿತ್ತು! ಒಂದು ದಿನ ಅವನು ತಾಯಿಗೆ ಕೇಳಿದ- "ಈ ಶಿಖರವನ್ನು ಯಾರಾದರೂ ಹತ್ತಿರುವರೇನಮ್ಮ?" ತಾಯಿ ಹೇಳಿದಳು- "ಇಲ್ಲ ಮಗು, ಇದೂವರೆಗೆ ಜಗತ್ತಿನಲ್ಲಿ ಯಾರೂ ಅದನ್ನು ಹತ್ತಿಲ್ಲ; ಹತ್ತುವ ಪ್ರಯತ್ನವನ್ನೂ ಮಾಡಿಲ್ಲ!" ಅದೇ ದಿನ ತೇನಸಿಂಗನು ಶಿಖರವನ್ನು ಹತ್ತುವ ನಿರ್ಣಯ ಮಾಡಿದ. ಅದೆಂಥ ನಿರ್ಣಯವದು! ಕುಳಿತರೆ ನಿಂತರೆ ಅದರದೆ ಕನಸು! ಅದೆಷ್ಟು ಬಾರಿ ಆತ ಕನಸಿನಲ್ಲಿ ಆ ಶಿಖರವನ್ನು ಏರಿ ಇಳಿದನೋ; ಇಳಿದು ಏರಿದನೋ? ಸದಾ ಮನಸಿನಲ್ಲಿ ಅದರದೇ ಚಿಂತನೆ. ಅದೇನು ಸಾಮಾನ್ಯ ಶಿಖರವಲ್ಲ. ಆ ಶಿಖರವನ್ನು ಏರುವಾಗ ಯಾವುದೇ ಕ್ಷಣವೂ ಜೀವನದ ಕೊನೆಯ ಕ್ಷಣವಾಗಬಹುದು. ಆದರೆ ಆತ ಅಷ್ಟೇ ಛಲದಿಂದ, ಉತ್ಸಾಹದಿಂದ, ಪ್ರೇಮದಿಂದ ನಿರಂತರ ಪ್ರಯತ್ನಿಸಿದ. ಅದ್ಭುತ ಸಾಧನೆಯದು. ಶಿಖರವನ್ನೇರುವ ಕನಸು ಆತನ ಮೈ-ಮನವನುಂಡು ಪ್ರಾಣಕ್ಕೆ ಪ್ರಾಣವಾಯಿತು. ಒಂದು ದಿನ ಆತನ ಕನಸು ನನಸಾಯಿತು! ಜಗತ್ತಿನ ಅತ್ಯುನ್ನತ ಶಿಖರವನ್ನು ಏರಿದ ಪ್ರಪ್ರಥಮ ವ್ಯಕ್ತಿಯಾದ! ಆತನದು ಅದಮ್ಯ ಉತ್ಸಾಹ!
ಶ್ರೀ ಸಿದ್ಧೇಶ್ವರ ಸ್ವಾಮೀಜಿ, ವಿಜಯಪುರ. ಸಂಗ್ರಹ: ವೀರೇಶ್ ಅರಸಿಕೆರೆ.
No comments:
Post a Comment
ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you